ಯಲ್ಲಮ್ಮನಗುಡ್ಡ: ಎರಡೇ ತಿಂಗಳಲ್ಲಿ ₹1.81 ಕೋಟಿ ಕಾಣಿಕೆ ಸಂಗ್ರಹ

ಉಗರಗೋಳ: ಯಲ್ಲಮ್ಮನಗುಡ್ಡದಲ್ಲಿ ಮಾರ್ಚ್ 13ರಿಂದ 17ರವರೆಗೆ ಹುಂಡಿ ಎಣಿಕೆ ಮಾಡಲಾಗಿದ್ದು, ₹1.81 ಕೋಟಿಗಿಂತ ಅಧಿಕ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
2023ರ ಜನವರಿ ಹಾಗೂ ಫೆಬ್ರುವರಿಯಲ್ಲಿ ನಡೆದ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆ ಜಾತ್ರೆಗೆ ಬಂದಿದ್ದ ಭಕ್ತರು, ಯಲ್ಲಮ್ಮ ದೇವಿ ದೇವಸ್ಥಾನ ಹುಂಡಿಯಲ್ಲಿ ಹಾಕಿದ್ದ ₹1.66 ಕೋಟಿ ನಗದು, ₹12.83 ಲಕ್ಷ ಮೌಲ್ಯದ 235 ಗ್ರಾಂ ಚಿನ್ನಾಭರಣ ಹಾಗೂ ₹2.46 ಲಕ್ಷ ಮೌಲ್ಯದ 3.7 ಕೆ.ಜಿ ಬೆಳ್ಳಿ ಆಭರಣ ಸಂಗ್ರಹವಾಗಿವೆ.
ಧಾರ್ಮಿಕ ದತ್ತಿ ಇಲಾಖೆ, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ, ಸವದತ್ತಿ ತಹಶೀಲ್ದಾರ್ ಕಚೇರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕೆನರಾ ಬ್ಯಾಂಕ್ ಮತ್ತು ಯಲ್ಲಮ್ಮ ದೇವಿ ದೇವಸ್ಥಾನ ಸಿಬ್ಬಂದಿ ಐದು ದಿನಗಳವರೆಗೆ ಎಣಿಕೆ ಮಾಡಿದರು.
ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ, 'ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಲಾಗುವುದು. ಭಕ್ತರಿಗೆ ಶುದ್ಧ ಕುಡಿಯುವ ನೀರು, ವಸತಿ ಮತ್ತಿತರ ಮೂಲಸೌಕರ್ಯ ಒದಗಿಸಲಾಗುವುದು' ಎಂದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಬಸವರಾಜ ಜೀರಗ್ಯಾಳ, ಸಮಿತಿ ಸದಸ್ಯರಾದ ವೈ.ವೈ.ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ಲಕ್ಷ್ಮಿ ಹೂಲಿ, ಪುಂಡಲೀಕ ಮೇಟಿ, ಶಶಿಕಲಾ ಚಂದರಗಿ, ಶೈಲಾ ಪತ್ತಾರ, ದೇವಸ್ಥಾನ ಅರವಿಂದ್ರ ಮಾಳಗೆ, ಸಂತೋಷ ಶಿರಸಂಗಿ, ಎಸ್.ಎಲ್.ಯಲಿಗಾರ, ಎಂ.ವಿ.ಮುಳ್ಳೂರ, ಡಿ.ಆರ್.ಚವ್ಹಾಣ, ಪಿ.ಎಫ್.ಗೋವನಕೋಪ್ಪ ಇದ್ದರು.