ಕುಡಿತ ಬಿಡುವಂತೆ ಬೈದು ಬುದ್ಧಿ ಹೇಳಿದ್ದ ಹೆಂಡತಿ; ರಸ್ತೆ ಪಕ್ಕದ ಮರಕ್ಕೆ ನೇಣು ಬಿಗಿದುಕೊಂಡ ಗಂಡ

ಮೃತ ವ್ಯಕ್ತಿಯನ್ನು ಮಾದೇವ ಎಂದು ಗುರುತಿಸಲಾಗಿದ್ದು, ಮೂಲತಃ ಚನ್ನಪಟ್ಟಣದ ನಿವಾಸಿಯಾಗಿದ್ದ. 15 ವರ್ಷಗಳ ಹಿಂದೆ ಯಶೋದಾ ಎಂಬಾಕೆಯನ್ನು ಮದುವೆಯಾಗಿದ್ದ. ಮದುವೆಯಾದ ಬಳಿಕ ಇಬ್ಬರು ಮಕ್ಕಳು ಮಕ್ಕಳಿದ್ದು, ಕುಡಿತಕ್ಕೆ ದಾಸನಾಗಿದ್ದ. ಪ್ರತಿನಿತ್ಯ ಕುಡಿಯುವುದು ಹೆಂಡತಿ ಮಕ್ಕಳಿಗೆ ಟಾರ್ಚರ್ ನೀಡುವುದನ್ನೇ ಈತ ಕಾಯಕ ಮಾಡಿಕೊಂಡಿದ್ದ.
ಪೊಲೀಸರು ಸರಿಯಾಗಿ ಜೀವನ ನಡೆಸುವಂತೆ ಬುದ್ಧಿ ಮಾತು ಹೇಳಿದ್ದರು
ಗಂಡನ ಕಾಟ ತಾಳಲಾರದೆ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಪೊಲೀಸರು ಗಂಡನಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೂ ನಿನ್ನೆ ಕುಡಿದು ಬಂದು ಹೆಂಡತಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಇದರಿಂದ ಗಾಬರಿಗೊಂಡ ಪತ್ನಿ ಯಶೋಧಾ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಮನೆ ಬಳಿ ಬಂದು ಬುದ್ದಿವಾದ ಹೇಳಿ ಹೋದ್ದರು. ಆದರೆ ಈತ ಪಾಪರೆಡ್ಡಿಪಾಳ್ಯದ ರಸ್ತೆ ಬದಿಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮೃತನ ಪತ್ನಿ ಯಶೋಧಾ, ಊಟ ಮಾಡುತ್ತಾ ತಟ್ಟೆಯನ್ನು ಬೀಸಾಡುವುದು. ಮನೆಯಲ್ಲಿ ಅನ್ನ ಮಾಡುತ್ತಿದ್ದಾರೆ ನೀರು ಹಾಕೋದು, ಕೆಟ್ಟದಾಗಿ ಮಾತನಾಡುವುದು. ಹೊಡೆಯುವುದನ್ನು ನಿತ್ಯ ಮಾಡುತ್ತಿದ್ದ. ಮಕ್ಕಳನ್ನು ನೋಡಿಕೊಂಡು ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದೆ. ದಿನದ 24 ಗಂಟೆಯೂ ಚಿತ್ರಹಿಂಸೆ ಕೊಡುತ್ತಿದ್ದ ಎಂದು ಹೇಳಿದ್ದಾರೆ.ಮೂರು ಮದುವೆ ಆಗಿದ್ದ ಮಾದೇವ ಕುಡಿತಕ್ಕೆ ದಾಸ!
ರಾಮನಗರ ಜಿಲ್ಲೆ ಚನ್ನಪಟ್ಟಣದ ಮಾದೇವನಿಗೆ ಯಶೋದಗಿಂತಲೂ ಮೊದಲೇ ಇಬ್ಬರ ಜೊತೆಗೆ ಮದುವೆ ಆಗಿತ್ತು. ಆದರೆ ಈತನ ಕಾಟ ತಾಳಲಾರದೆ ಅವರು ಬಿಟ್ಟು ಹೋಗಿದ್ದರು. ಯಶೋದಾ ಮದುವೆ ಆದ ಮೇಲೆ ಸ್ವಲ್ಪ ಬುದ್ಧಿ ಹೇಳಿಕೊಂಡು ಜೀವನ ಮಾಡುತ್ತಿದ್ದರು. ಆದರೆ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಮಾದೇವ ಎಲ್ಲಾ ಹಣದಲ್ಲೂ ಕುಡಿದು ರಂಪಾಟ ಮಾಡುತ್ತಿದ್ದ. ಕುಡಿತದ ಚಟದಿಂದಲೇ ಕುಡಿದ ಮತ್ತಿನಲ್ಲಿ ರಸ್ತೆ ಬದಿಯ ಮರಕ್ಕೆ ಪಂಚೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಬ್ಬರು ಹೆಂಡತಿಯರಿಂದ ದೂರ ಆಗಿದ್ದ ಮಾದೇವ ಮೂರನೇ ಮದುವೆಯಾಗಿ ಇಬ್ಬರು ಮಕ್ಕಳಿದರೂ ಕುಡಿತಕ್ಕೆ ದಾಸನಾಗಿ ಸಂಸಾರ ಹಾಳು ಮಾಡಿದ್ದು ಮಾತ್ರವಲ್ಲದೆ ತನ್ನ ಜೀವನವನ್ನೂ ಅಂತ್ಯ ಮಾಡಿಕೊಂಡಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.