ಕರ್ನಾಟಕ ಕಾಂಗ್ರೆಸ್ ಛಿದ್ರ ಮಾಡಲು 500 ಕೋಟಿ ಆಫರ್: ನಾನು ತೆಲಂಗಾಣ ಸಿಎಂನನ್ನು ಭೇಟಿ ಮಾಡಿದ್ದು ಸತ್ಯ. ಎನ್ನುತ್ತಲೇ ಜಮೀರ್ ಹೇಳಿದ್ದೇನು?

ಮೈಸೂರು: ಕರ್ನಾಟಕ ಕಾಂಗ್ರೆಸ್ ಅನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಛಿದ್ರ ಮಾಡಲು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರು ಕರ್ನಾಟಕದ ಶಾಸಕರೊಬ್ಬರಿಗೆ 500 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದು ತೆಲಂಗಾಣ ಕೆಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ಒಡಕುಂಟು ಮಾಡಲು ಶಾಸಕ ಜಮೀರ್ ಅಹಮದ್ 500 ಕೋಟಿ ಆಮಿಷಕ್ಕೆ ಒಳಗಾದ್ರಾ? ಎಂಬಿತ್ಯಾದಿ ಚರ್ಚೆಗಳು ಶುರುವಾಗಿದೆ. ಈ ಬಗ್ಗೆ ಜಮೀರ್ ಅವರು ಹೇಳಿದ್ದೇನು ಗೊತ್ತಾ?
ನಾನು ತೆಲಂಗಾಣ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದು ಸತ್ಯ. ಆದರೆ 500 ಕೋಟಿ ರೂ. ಆಫರ್ ಬಗ್ಗೆ ಗೊತ್ತಿಲ್ಲ ಎಂದು ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.
ಮೈಸೂರಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ನಾನು ಹೈದರಾಬಾದ್ಗೆ ಹೋಗಿದ್ದು ನಿಜ. ಕೆಸಿಆರ್ ಭೇಟಿ ಮಾಡಿದ್ದೂ ನಿಜ. ನಮ್ಮ ಭೇಟಿಯಲ್ಲಿ ರಾಜಕೀಯ ಚರ್ಚೆ ಆಗಿಲ್ಲ. ಶಾಸಕ ರೋಹಿತ್ ರೆಡ್ಡಿ ನನ್ನ ಸ್ನೇಹಿತ. ಅವರು ಸಿಎಂ ಚಂದ್ರಶೇಖರ ರಾವ್ ಅವರನ್ನು ಭೇಟಿ ಮಾಡುವಂತೆ ಕೇಳಿಕೊಂಡಿದ್ದರು. ಅವರೇ ಬೇರೆ ಪಕ್ಷ, ನಾವೇ ಬೇರೆ ಪಕ್ಷ, ಏನೂ ಸಂಬಂಧವೇ ಇಲ್ಲ. 500 ಕೋಟಿ ರೂ. ಬಗ್ಗೆ ಯಾರು ಆರೋಪ ಮಾಡಿದ್ದಾರೋ ಅವರನ್ನೇ ಕೇಳಿ ಎಂದಿದ್ದಾರೆ.