ಯಾರೋ ಒಬ್ಬರ ಲಾಭಕ್ಕಾಗಿ ನಿಯಮ ಬದಲಾಯಿಸೋದಕ್ಕೆ ಆಗಲ್ಲ - ಸಚಿವ ಆರ್.ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಜನರ ಹಿತದೃಷ್ಠಿಯಿಂದ, ಆರೋಗ್ಯದ ಹಿತದೃಷ್ಠಿಯಿಂದ ವೀಕೆಂಡ್ ( Weekend Curfew ), ನೈಟ್ ಕರ್ಪ್ಯೂ ( Night Curfew ) ಜಾರಿಗೊಳಿಸಲಾಗಿದೆ. ನಮಗೆ ಜನರ ಹಿತವನ್ನು ಕಾಪಾಡುವುದು ಮುಖ್ಯ. ಅದರ ಹೊರತಾಗಿ ಯಾರೋ ಒಬ್ಬರ ಲಾಭಕ್ಕಾಗಿ ನಿಯಮ ಬದಲಾಯಿಸೋದಕ್ಕೆ ಆಗೋದಿಲ್ಲ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ( Minister R Ashok ) ತಿಳಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಜನವರಿ 31ರ ಬಳಿಕ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಮುಂದುವರೆಸೋದಾ ಅಥವಾ ಬೇಡವಾ ಎನ್ನುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು. ನಮಗೆ ಜನರ ಆರೋಗ್ಯ, ಪ್ರಾಣದ ರಕ್ಷಣೆ ಮುಖ್ಯವಾಗಿದೆ. ಈ ಕಾರಣದಿಂದಲೇ ವೀಕೆಂಡ್ ಹಾಗೂ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಇದು ನಮ್ಮ ಕರ್ತವ್ಯ ಕೂಡ ಆಗಿದೆ. ಅದರ ಹೊರತಾಗಿ ಯಾರೋ ಒಬ್ಬರ ಲಾಭಕ್ಕಾಗಿ ನಿಯಮವನ್ನು ಬದಲಾಯಿಸೋದಕ್ಕೆ ಆಗೋದಿಲ್ಲ ಎಂದರು. ಇನ್ನೂ ಕೇಂದ್ರ ಸರ್ಕಾರ, ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ಕೊರೋನಾ ನಿಯಂತ್ರಣ ಕ್ರಮಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಈ ಕಾರಣದಿಂದಾಗಿಯೇ ವೀಕೆಂಡ್ ಕರ್ಪ್ಯೂ ನಂತ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ತಜ್ಞರು ಸಹ ಭಾಗವಹಿಸಲಿದ್ದಾರೆ. ಅಲ್ಲಿ ಈ ಎಲ್ಲಾ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.