ಬೆಂಗಳೂರಲ್ಲಿ ಮಳೆ ಅಬ್ಬರ

ಬೆಂಗಳೂರು, ನವೆಂಬರ್ 13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಆಗಾಗ ಮಳೆ ಸುರಿಯುತ್ತಿದ್ದು, ಭಾನುವಾರ ಈ ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಭಾನುವಾರ ಸಂಜೆ ನಂತರ ತಡರಾತ್ರಿವರೆಗೂ ಗುಡುಗು ಸಹಿತ ಜೋರು ಮಳೆ ಅಬ್ಬರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ವಾಯುಭಾರ ಕುಸಿತವು ಅರಬ್ಬಿ ಸಮುದ್ರದ ಪ್ರವೇಶಿಸಿ ದುರ್ಬಲಗೊಳ್ಳುವ ನಿರೀಕ್ಷೆ ಇದೆ. ಹಾಗೆಂದ ಮಾತ್ರಕ್ಕೆ ಬೆಂಗಳೂರು ಮಳೆಯಿಂದ ಮುಕ್ತವಾಗುವುದಿಲ್ಲ. ಕಾರಣ ನವೆಂಬರ್ 16ಕ್ಕೆ ಈಶಾನ್ಯ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಪ್ರದೇಶ ನಿರ್ಮಾಣಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದರ ಪ್ರಭಾವವು ಬೆಂಗಳೂರಿನ ಮೇಲಾಗಬಹುದು.
ಮುಂದಿನ ಒಂದು ವಾರ ಬೆಂಗಳೂರಿಗೆ ಮಳೆ ಕಿರಿಕಿರಿ ಇರಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಬೆಳಗ್ಗೆ, ಸಂಜೆ ಆಗಾಗ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಇದರಲ್ಲಿ ಶನಿವಾರ ರಾತ್ರಿ ಮಳೆ ಇನ್ನಷ್ಟು ಚುರುಕುಗೊಂಡ ಪರಿಣಾಮ ಹಂಪಿನಗರದಲ್ಲಿ ಅತ್ಯಧಿಕ ಮಳೆ 30ಮಿ.ಮೀ. ಮಳೆ ದಾಖಲಾಗಿದೆ. ಭಾನುವಾರ ಇದಕ್ಕಿಂತಲೂ ಮಳೆ ಹಚ್ಚಾಗಿ ಸುರಿಯುವ ನಿರೀಕ್ಷೆ ಇದೆ.
ಬಹುತೇಕ ಕಡೆಗಳಲ್ಲಿ ಜೋರು ಮಳೆ
ಕಳೆದ 24ಗಂಟೆಯಲ್ಲಿ ಹಂಪಿನಗರದಲ್ಲಿ ಅಧಿಕ ಮಳೆಯಾಗಿದ್ದು, ಉಳಿದಂತೆ ವಿದ್ಯಾಪೀಠ 27ಮಿ.ಮೀ., ಬೆಳ್ಳಂದೂರು 26.5 ಮಿ.ಮೀ., ಬೇಗೂರು 25ಮಿ.ಮೀ., ಕೊಟ್ಟಿಗೆಪಾಳ್ಯ ಮತ್ತು ಸಂಪಂಗಿರಾಮನಗರ ತಲಾ 24ಮಿ.ಮೀ., ದೊರೆಸಾನಿಪಾಳ್ಯ ಮತ್ತು ವನ್ನಾರಪೇಟೆ ತಲಾ 23.5ಮಿ.ಮೀ., ಅರೆಕೆರೆಯಲ್ಲಿ 22ಮಿ.ಮೀ., ಬೊಮ್ಮನಹಳ್ಳಿ, ರಾಜಮಹಲ್ ಗುಟ್ಟಹಳ್ಳಿ, ಬಿಳೇಕಳ್ಳಿ ತಲಾ 21.5ಮಿ.ಮೀ. ಮಳೆ ದಾಖಲಾಗಿದೆ ಎಂದು ಕರ್ನಾಟಕ ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಇದೇ ಅವಧಿಯಲ್ಲಿ ನಗರದ ದೊಡ್ಡಾನೆಕ್ಕುಂದಿ, ಎಚ್ಎಸ್ಆರ್ ಬಡಾವಣೆ, ಮಾರುತಿ ಮಂದಿರ, ಕಾಟನ್ಪೇಟೆ, ಮಾರತ್ತಹಳ್ಳಿ, ನಾಗಪುರ, ವಿಜಯನಗರ, ರಾಜಾಜಿನಗರ ಮತ್ತಿತರ ಕಡೆಗಳಲ್ಲಿ ಹಗುರ ಮಳೆ ಆಗಿದೆ. ಇದರಿಂದ ರಸ್ತೆಗಳಲ್ಲಿ ನೀರು ನಿಂತು ಕೆಲವೆಡೆ ಸಂಚಾರ ದಟ್ಟಣೆ ಸೃಷ್ಟಿಯಾಯಿತು. ಆಗಾಗ ಸುರಿದ ಜಿಟಿ ಜಿಟಿ ಮಳೆಯಿಂದ ಜನ ಕಿರಿಕಿರಿ ಅನುಭವಿಸಿದರು.
ಮುಂದಿನ ಎರಡು ದಿನ ಪೈಕಿ ಭಾನುವಾರ ಅತ್ಯಧಿಕ ಮಳೆ, ಸೋಮವಾರ ತುಸು ತುಂತುರು ಮಳೆ ಬರಲಿದೆ. ಮಂಗಳವಾರ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಆಗಾಗ ಬಿಸಿಲಿನ ದರ್ಶನವು ಇರಲಿದೆ