ನೆಲಮಂಗಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮೇಲೆ ಹಣದ ಸುರಿಮಳೆಗೈದ ಜನ!

ನೆಲಮಂಗಲ: ಮತದಾರರನ್ನು ಸೆಳೆಯಲು ರಾಜಕಾರಣಿಗಳು ನಾನಾ ರೀತಿಯ ಕಸರತ್ತು ಮಾಡೋದು ಸಹಜ. ಅದ್ರಲ್ಲೂ ಚುನಾವಣೆ ಹತ್ತಿರ ಬಂತದ್ರೆ ಸಾಕು, ಎಲ್ಲಾ ಕಡೆಗಳಲ್ಲೂ ಗಿಫ್ಟ್ ಪಾಲಿಟಿಕ್ಸ್ನದ್ದೇ ಸುದ್ದಿ. ಇದೀಗ ಟಿಕೆಟ್ ಆಕಾಂಕ್ಷಿ ಶ್ರೀನಿವಾಸ್ ಕಾಂಗ್ರೆಸ್ನಿಂದ ಟಿಕೆಟ್ ಪಡೆಯುವ ಸಲುವಾಗಿ ವಿವಿಧ ಆಮಿಷದ ಗಿಮಿಕ್ ಮಾಡಲು ಮುಂದಾಗಿದ್ದಾರೆ.
ಈ ಬಾರಿ ನೆಲಮಂಗಲ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಶ್ರೀನಿವಾಸ್ ಕಳೆದ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಆಗ ವೇದಿಕೆಯಲ್ಲಿದ್ದ ಸ್ಥಳೀಯರು ಶ್ರೀನಿವಾಸ್ ಮೇಲೆ ಗರಿಗರಿ ನೋಟಿನ ಮಳೆ ಸುರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಸ್ಥಳೀಯರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರುದಿನ ಬೆಳಗ್ಗೆ ಶ್ರೀನಿವಾಸ್ ಹಬ್ಬದ ಉಡುಗೊರೆಯ ನೆಪದಲ್ಲಿ ತಾಲೂಕಿನಲ್ಲಿ ಜನರಿಗೆ ಕುಕ್ಕರ್ ಹಂಚಿದ್ದು, ತಾಲೂಕಿನ ಜನರು ಕುಕ್ಕರ್ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬಿದ್ದ ಘಟನೆ ನಡೆದಿದೆ. ಚುನಾವಣೆಗೂ ಮುನ್ನವೇ ಆಕಾಂಕ್ಷಿಯ ಗಿಮಿಕ್ ಪ್ರಚಾರ ಕಂಡು ಟೀಕೆಗಳು ಕೇಳಿಬರುತ್ತಿವೆ.