ಕರ್ನಾಟಕಕ್ಕೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ?

ಬೆಂಗಳೂರು : ಇನ್ನೇನು ಕರ್ನಾಟಕ ವಿಧಾನಸಭಾ ಕ್ಷೇತ್ರದ ಚುನಾವಣೆ ಸಮೀಪಿಸುತ್ತಿದೆ. ಮುಂದಿನ ಆರು ತಿಂಗಳಲ್ಲಿ ಚುನಾವಣೆ ಎದುರಾಗಲಿದೆ. ಹಾಗಾಗಿಯೇ ಎಲ್ಲಾ ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಚುನಾವಣೆಯ ಅಖಾಡ ದಿನೇ ದಿನೇ ರಂಗೇರುತ್ತಿದೆ.
ಕಾಂಗ್ರೆಸ್ ಪಕ್ಷ ಚುನಾವಣಾ ತಯಾರಿಯಾಗಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದರೆ ಬಿಜೆಪಿ ಮಾತ್ರ ತನ್ನ ಹಳೆಯ ತಪ್ಪನ್ನು ತಿದ್ದಿಕೊಳ್ಳುವ ಯೋಚನೆಯಲ್ಲಿದೆ. ರಾಜ್ಯ ರಾಜಕಾರಣದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ, ಪೇ ಸಿಎಂ ಆರೋಪಗಳು ಬಿಜೆಪಿಯನ್ನು ಮುಜುಗರಕ್ಕೆ ಈಡು ಮಾಡಿರುವ ಕಾರಣಕ್ಕೆ ಈ ಚುನಾವಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಹೈಕಮಾಂಡ್ ನೇರವಾಗಿ ನಿಭಾಯಿಸಲು ನಿರ್ಧರಿಸಿದೆ.
ಹಾಗಾಗಿ ಈ ಬಾರಿ ಬಹುತೇಕ ಕ್ಷೇತ್ರಗಳಿಗೆ ಆರು ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಧ್ಯತೆಗಳಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಇನ್ನೆರೆಡು ದಿನದಲ್ಲಿ ಕೇಂದ್ರದಿಂದ 12 ಜನರ ತಂಡವೊಂದು ಭೇಟಿ ನೀಡಲಿದೆ. ಈ ತಂಡ ಎಲ್ಲಾ ಅಭ್ಯರ್ಥಿಗಳೊಂದಿಗೆ ನೇರವಾಗಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಿದೆ.ಈ ತಂಡ ಮೂರು ದಿನಗಳ ಕಾಲ ಬೆಂಗಳೂರಿನಲ್ಲೇ ಬೀಡು ಬಿಟ್ಟು ಪ್ರತಿ ಮಾಹಿತಿಯನ್ನೂ ಕಲೆ ಹಾಕಿ ಹೈಕಮಾಂಡ್ ಗೆ ಅಂತಿಮ ವರದಿ ಸಲ್ಲಿಸುವ ಸಾಧ್ಯತೆ ಇದೆ. ಈ ವೇಳೆಯಲ್ಲಿಯೇ ಹಲವು ಅಭ್ಯರ್ಥಿಗಳಿಗೆ ಮುಂದಿನ ಚುನಾವಣೆಯ ಟಿಕೆಟ್ ಪಕ್ಕಾ ಆಗುವ ಸಾಧ್ಯತೆಯಿದೆ.
ಹೊಸಬರಿಗೆ ಅವಕಾಶ : ಸುಮಾರು 100 ವಿಧಾನ ಸಭಾ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲು ಬಿಜೆಪಿ ಯೋಚಿಸುತ್ತಿದ್ದು ಹಲವು ಸಂಘಪರಿವಾರದ ನಾಯಕರಿಗೆ, ನಿವೃತ್ತ ಅಧಿಕಾರಿಗಳಿಗೆ, ಸಮಾಜ ಸೇವಕರಿಗೆ ಮತ್ತು ಹಿಂದೂ ಹೋರಾಟಗಾರರಿಗೆ ಈ ಬಾರಿ ಅವಕಾಶ ಸಿಗುವ ಸಾಧ್ಯತೆಗಳು ದಟ್ಟವಾಗಿದೆ. ಕೇಂದ್ರದ ತಂಡ ಭೇಟಿ ಕೊಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರದ ಆಕಾಂಕ್ಷಿಗಳೂ ಆದಿತ್ಯವಾರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗುತ್ತಿದೆ.