ಈಗಿನ ಟೀಮ್ ಇಂಡಿಯಾದಲ್ಲಿ ತನ್ನಂತೆ ಬ್ಯಾಟಿಂಗ್ ಮಾಡುವ ಆಟಗಾರ ಯಾರೆಂಬುದನ್ನು ತಿಳಿಸಿದ ವೀರೂ!

ನವದೆಹಲಿ: ಮೊದಲ ಎಸೆತದಲ್ಲೇ ಬೌಂಡರಿ ಸಿಕ್ಸರ್ ಬಾರಿಸುವ ಆಟಗಾರ ಯಾರು ಅಂತ ಕೇಳಿದತೆ ಥಟ್ಟನೆ ಕ್ರೀಡಾಭಿಮಾನಿಗಳ ನೆನಪಿಗೆ ಬರುವುದು ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್. ವೀರೂ ರೀತಿಯ ಆರಂಭಿಕ ಆಟಗಾರರನ್ನು ಇದುವರೆಗೂ ಯಾವುದೇ ತಂಡದಲ್ಲಿ ನೋಡಿಲ್ಲ.
ಟೆಸ್ಟ್ ಕ್ರಿಕೆಟ್ನಲ್ಲಿ ಕಡಿಮೆ ಎಸೆತಕ್ಕೆ 300 ರನ್ ಗಡಿ ದಾಟಿರುವ ಮೊದಲ ಆಟಗಾರ ವೀರೂ ಮತ್ತು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಬಳಿಕ ಏಕದಿನ ಪಂದ್ಯದಲ್ಲಿ ಕಡಿಮೆ ಎಸೆತದಲ್ಲಿ 219 ರನ್ ಬಾರಿಸಿದ ಎರಡನೇ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಯನ್ನು ವೀರೂ ಹೊಂದಿದ್ದಾರೆ. ಒಟ್ಟು 104 ಟೆಸ್ಟ್ ಪಂದ್ಯಗಳನ್ನಾಡಿರುವ ಸೆಹ್ವಾಗ್ 8586 ರನ್ ಗಳಿಸಿದ್ದಾರೆ. ಅದೇ ರೀತಿ 251 ಏಕದಿಂದ ಪಂದ್ಯಗಳಿಂದ 8273 ರನ್ ಹಾಗೂ 19 ಟಿ20 ಪಂದ್ಯಗಳಿಂದ 394 ರನ್ ಗಳಿಸುವ ಮೂಲಕ ಟೀಂ ಇಂಡಿಯಾಗೆ ತಮ್ಮದೇ ವಿಶೇಷ ಕೊಡುಗೆಯನ್ನು ವೀರೂ ನೀಡಿದ್ದಾರೆ. 2013ರ ಮಾರ್ಚ್ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ವೀರೂ ಕೊನೆಯ ಪಂದ್ಯವನ್ನು ಆಡಿದರು.
ಇದೀಗ ವೀರೂ ಪ್ರಸ್ತುತ ತಲೆಮಾರಿನ ಕ್ರಿಕೆಟಿಗರ ಬಗ್ಗೆ ಮಾತನಾಡಿದ್ದು, ತನ್ನಂತೆ ಆಟವಾಡುವ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಈಗಿನ ತಲೆಮಾರಿನಲ್ಲಿ ಇಲ್ಲ ಎಂದಿದ್ದಾರೆ.
ಭಾರತ ತಂಡದಲ್ಲಿ ನನ್ನಂತೆ ಬ್ಯಾಟಿಂಗ್ ಮಾಡುವ ಯಾವುದೇ ಆಟಗಾರ ಇಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ನನ್ನ ಮನಸ್ಸಿಗೆ ಬಂದ ಇಬ್ಬರು ಆಟಗಾರರು ಯಾರೆಂದರೆ ಅದು ಪೃಥ್ವಿ ಶಾ ಮತ್ತು ರಿಷಬ್ ಪಂತ್. ರಿಷಬ್ ಪಂತ್ ನನಗೆ ಸ್ವಲ್ಪ ಹತ್ತಿರವಾಗಿದ್ದಾರೆ. ರಿಷಬ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 90-100 ರನ್ಗಳಿಗೆ ತೃಪ್ತಿ ಹೊಂದುತ್ತಿದ್ದಾರೆ. ಆದರೆ ನಾನು 200, 250 ಮತ್ತು 300 ರನ್ಗಳಿಗೆ ತೃಪ್ತಿ ಹೊಂದಿದ್ದೇನೆ. ತಮ್ಮ ಆಟವನ್ನು ರಿಷಬ್ ಆ ಮಟ್ಟಕ್ಕೆ ಕೊಂಡೊಯ್ದರೆ ಅವರು ಅಭಿಮಾನಿಗಳನ್ನು ಇನ್ನಷ್ಟು ರಂಜಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಸೆಹ್ವಾಗ್ ತಿಳಿಸಿದ್ದಾರೆ.
ಇತ್ತೀಚೆಗೆ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರರು ಆಗಾಗ ಗಾಯಗೊಳ್ಳುತ್ತಿರುವ ಬಗ್ಗೆ ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ. ಆಟಗಾರರು ಗಾಯಗೊಳ್ಳುವುದರಲ್ಲಿ ವೇಟ್ಲಿಫ್ಟಿಂಗ್ ವ್ಯಾಯಾಮಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ವೀರೂ ಅಭಿಪ್ರಾಯಪಟ್ಟರು. ಕ್ರಿಕೆಟ್ನಲ್ಲಿ ಹೆಚ್ಚಿನ ವ್ಯಾಯಾಮದ ಪಾತ್ರವಿಲ್ಲ. ಆಟಗಾರರು ವೇಟ್ಲಿಫ್ಟಿಂಗ್ ಬದಲು ಹೆಚ್ಚಾಗಿ ತಮ್ಮ ಆಟದ ಮೇಲೆ ಗಮನ ಹರಿಸಬೇಕು ಎಂದು ಸೆಹ್ವಾಗ್ ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಭಾರತೀಯ ಆಟಗಾರರು ಜಿಮ್ನಲ್ಲಿ ಗಾಯಗೊಂಡಿದ್ದಾರೆ ಹೊರತು ಮೈದಾನದಲ್ಲಿ ಅಲ್ಲ ಎಂದು ವೀರೂ ಭಾವಿಸಿದ್ದಾರೆ.
ಕ್ರಿಕೆಟ್ನಲ್ಲಿ ವೇಟ್ಲಿಫ್ಟಿಂಗ್ಗೆ ಜಾಗವಿಲ್ಲ, ಬದಲಿಗೆ ನಿಮ್ಮ ಆಟವನ್ನು ಸುಧಾರಿಸುವ ವ್ಯಾಯಾಮಗಳನ್ನು ನೀವು ಮಾಡಬೇಕು. ವೇಟ್ಲಿಫ್ಟಿಂಗ್ ನಿಮಗೆ ಶಕ್ತಿ ನೀಡುತ್ತದೆ. ಆದರೆ ಬಿಗಿತ, ಸೆಳೆತ ಮತ್ತು ನೋವನ್ನು ಹೆಚ್ಚಿಸುತ್ತದೆ. ನಮ್ಮ ದಿನಗಳಲ್ಲಿ, ಆಕಾಶ್ ಚೋಪ್ರಾ, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ಎಂಎಸ್ ಧೋನಿ ಅಥವಾ ಯುವರಾಜ್ ಸಿಂಗ್, ಬೆನ್ನು, ಮಂಡಿರಜ್ಜು ಅಥವಾ ಕ್ವಾಡ್ರೈಸ್ಪ್ ಗಾಯಗಳಿಂದಾಗಿ ಯಾರೂ ತಂಡದಿಂದ ಹೊರಗುಳಿಯಲಿಲ್ಲ ಎಂದು ಸೆಹ್ವಾಗ್ ಹೇಳಿದರು. (ಏಜೆನ್ಸೀಸ್)