ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಮುಂದಿನ ರಾಜಕೀಯ ಬಗ್ಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದು ಹೀಗೆ.​

ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಮುಂದಿನ ರಾಜಕೀಯ ಬಗ್ಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದು ಹೀಗೆ.​

ಬೆಳಗಾವಿ: ಜೈಲಿಗೆ ಬಂದ ಮೇಲೆ ನನ್ನಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ನಾನು ಓದುವ ಹವ್ಯಾಸ ಬೆಳಸಿಕೊಂಡಿದ್ದೇನೆ ಎಂದು ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿನಯ್​​ ಕುಲಕರ್ಣಿಗೆ ಸುಪ್ರೀಂಕೋರ್ಟ್​ ಷರತ್ತುಬದ್ಧ ಜಾಮೀನು ನೀಡಿದ್ದು, ಬೆಳಗಾವಿಯ ಹಿಂಡಲಗಾ ಜೈಲಿನಿಂದ ಇಂದು ಬಿಡುಗಡೆಯಾದರು.

ಬಿಡುಗಡೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕೀಯ ಕುತಂತ್ರದಿಂದ ನಾನು ಜೈಲು ಸೇರಿದೆ ಎನ್ನುತ್ತಾ ಭಾವುಕರಾದರು. ನನಗೆ ನ್ಯಾಯಾಲಯದ ಮೇಲೆ ವಿಶ್ವಾಸವಿತ್ತು. ನಾನು ಜೈಲಿನಿಂದ ಹೊರಬರುತ್ತೇನೆಂದು ತಿಳಿದಿತ್ತು. ಜೈಲಿಗೆ ಬಂದಮೇಲೆ ನನ್ನಲ್ಲಿ ತುಂಬಾ ಬದಲಾವಣೆಯಾಗಿದೆ. ನಾನು ಓದುವ ಹವ್ಯಾಸ ಬೆಳಸಿಕೊಂಡಿದ್ದೆನೆ. ಇನ್ನು ಮುಂದೆ ನನ್ನ ರಾಜಕೀಯ ಹೆಜ್ಜೆಗಳನ್ನು ಬಹಳ ಎಚ್ಚರಿಕೆಯಿಂದ ಇಡುತ್ತೇನೆ ಎಂದು ತಿಳಿಸಿದರು.

ಒಟ್ಟು 9 ತಿಂಗಳು 16 ದಿನಗಳ ಸೆರೆವಾಸವನ್ನು ಮುಗಿಸಿದ ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಜೈಲಿನ ಮುಂದೆ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ಬಳಿಕ ತೆರೆದ ವಾಹನದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೆರವಣಿಗೆ ಕರೆದೊಯ್ಯಲಾಯಿತು. ಈ ವೇಳೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಿಸಿದರು. ಕರೊನಾ ಹಿನ್ನೆಲೆಯಲ್ಲಿ ವೀಕೆಂಡ್​ ಕರ್ಪ್ಯೂ ಇದ್ದರೂ ಜನಸ್ತೋಮ ಸೇರಿದ್ದು, ಕರೊನಾ ನಿಯಮ ಸ್ಪಷ್ಟವಾಗಿ ಉಲ್ಲಂಘನೆ ಆಗಿರುವುದು ಗೋಚರಿಸಿತು.

ಇನ್ನು ಧಾರವಾಡದ ವಿವಿಧ ಭಾಗಗಳಿಂದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಬೆಳಗಾವಿಗೆ ಆಗಮಿಸಿದ್ದಾರೆ. ತೆರೆದ ವಾಹನದಲ್ಲಿ ಹತ್ತಿ ಎಲ್ಲಿರಿಗೂ ಕೈ ಮುಗಿದು ವಿನಯ್​ ಕುಲಕರ್ಣಿ ಧನ್ಯವಾದ ತಿಳಿಸಿದರು.