ಹಿಂದೂ ವೈದಿಕ, ಪೌರಾಣಿಕ ಪದ; ಸ್ವಾಮಿ ಶಂಕರಾಚಾರ್ಯರಿಂದ ಪ್ರತಿಪಾದನೆ

ನವದೆಹಲಿ: “ಹಿಂದು ಶಬ್ದಕ್ಕೆ ವೈದಿಕ ಮೂಲವಿದೆ. ಇದು ಪುರಾತನ ಪದವೂ ಹೌದು’ ಎಂದು ಪುರಿಯ ಶಂಕರಾಚಾರ್ಯ ಸ್ವಾಮೀಜಿಗಳು ಸ್ಪಷ್ಟಪಡಿಸಿದ್ದಾರೆ.
ಈಗ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು ಎಬ್ಬಿಸಿರುವ ಹಿಂದೂ ಪದದ ವಿವಾದ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಈ ಪದಕ್ಕಾಗಿ ಹುಡುಕಾಟ ಆರಂಭವಾಗಿದೆ.
ಶಂಕರಾಚಾರ್ಯರ ಪ್ರಕಾರ, ಹಿಂದೂ ಶಬ್ದಕ್ಕೆ ಭಾರತೀಯ ಮೂಲವಿದೆ. ಮುಸ್ಲಿಮರ ಮುಹಮ್ಮದ್ ಪೈಗಂಬರ್ ಮತ್ತು ಕ್ರಿಶ್ಚಿಯನ್ನರ ಏಸುಕ್ರಿಸ್ತ ಬರುವ ಮುನ್ನವೇ ಹಿಂದೂ ಶಬ್ದದ ಬಳಕೆ ಇತ್ತು. ಇದು ಸೌಮ್ಯ, ಸುಂದರ, ಸ್ನೇಹಪರ, ಅಲಂಕೃತ, ನ್ಯಾಯಸಮ್ಮತ, ಮತ್ತು ಶತ್ರುಗಳನ್ನು ಕೊಲ್ಲುವ ಅರ್ಥದಲ್ಲಿ ಬಳಕೆ ಮಾಡಲಾಗುತ್ತಿತ್ತು ಎಂದಿದ್ದಾರೆ.
ಹಾಗೆಯೇ ಅಲೆಕ್ಸಾಂಡರ್ ಭಾರತಕ್ಕೆ ಬಂದಾಗ, ಹಿಂದೂಖುಷ್ ಪರ್ವತ ಅಥವಾ ಹಿಂದ್ಕೋಟ್ ಪರ್ವತವನ್ನು ನೋಡಲು ಆಸೆ ಪಟ್ಟಿದ್ದ ಎಂಬ ಉಲ್ಲೇಖಗಳಿವೆ. ಪಾರ್ಸಿಯವರ ಧರ್ಮಗ್ರಂಥವೊಂದರಲ್ಲಿ ಹಿಂದೂ ಪದದ ಉಲ್ಲೇಖವಿದೆ. ಪಾರ್ಸಿಯವರ ಅವೆಸ್ತಾದಲ್ಲಿಯೂ ಹಲವಾರು ಹಿಂದೂ ಪದಗಳಿವೆ. ಅಲೆಕ್ಸಾಂಡರ್ ಬರುವ ಮುನ್ನವೇ, ನೂರಾರು ವರ್ಷಗಳಿಂದ ಈ ಶಬ್ದಗಳನ್ನು ಬಳಕೆ ಮಾಡಲಾಗುತ್ತಿತ್ತು ಎಂದು ಶಂಕರಾಚಾರ್ಯರು ಹೇಳಿದ್ದಾರೆ.
ಕಲ್ಕಿ ಪುರಾಣದಲ್ಲಿಯೂ ಹಿಂದ್ವೋ ಪದವನ್ನು ಬಳಕೆ ಮಾಡಲಾಗಿದೆ. ಶರಗಂಧರ್ ಪದ್ಧತಿಯಲ್ಲಿಯೂ ಹಿಂದ್ವೋ ಎಂಬ ಪದ ಬಳಸಲಾಗಿದ್ದು, ಆಗಿನ ಜನರು ತಮ್ಮನ್ನು ವೇದ ಮಾರ್ಗೀಯರೆಂದೇ ಗುರುತಿಸಿಕೊಳ್ಳುತ್ತಿದ್ದರು. ಹಿಂದೂ ಎಂಬುದು ಆರ್ಯರ ಪದ. ಇಂದು, ಸಿಂಧು ಎಂಬ ಸಮನಾರ್ಥವುಳ್ಳ ಪದಗಳೂ ಸಂಸ್ಕೃತಕ್ಕೆ ಸೇರಿದವುಗಳೇ ಆಗಿವೆ.
ರಾಮ್ಕೋಶದಲ್ಲಿ ಬಳಕೆ :
ರಾಮ್ಕೋಶ ಮತ್ತು ಪಾರಿಜಾತರಣ್ ಎಂಬ ನಾಟಕದಲ್ಲಿ ಹಿಂದೂ ಪದ ಬಳಕೆ ಮಾಡಲಾಗಿದೆ. ಮಾಧವ ದಿಗ್ವಿಜಯದಲ್ಲಿ ಹಿಂದೂಗಳ ಸಂಬಂಧ ಬಹಳಷ್ಟು ಅರ್ಥಗಳಿವೆ. ಅಲ್ಲದೆ ಯಾವೊಬ್ಬ ವ್ಯಕ್ತಿ ವೇದದ ಬೀಜಾಕ್ಷರ ಮಂತ್ರಗಳಾದ ಓಂ ಅನ್ನು ಬಳಕೆ ಮಾಡುತ್ತಾನೆಯೋ, ಯಾರಿಗೆ ಪುನರ್ಜನ್ಮದ ಮೇಲೆ ನಂಬಿಕೆ ಇರುತ್ತದೆಯೋ, ಗೋವನ್ನು ಪೂಜಿಸುವಾತ, ಗಂಗೆಯನ್ನು ಪೂಜೆ ಮಾಡುವಾತ, ಭಾರತೀಯ ಸಂಪ್ರದಾಯದ ಪ್ರಕಾರ ವೇದಿಕ್ ಋಷಿಗಳನ್ನು ತನ್ನ ಗುರುವೆಂದು ನಂಬುವ, ಹಿಂಸಾತ್ಮಕ ಪ್ರಾಣಿಗಳನ್ನು ಕೊಲ್ಲುವ ಸಾಮರ್ಥವಿರುವಂಥ, ಕ್ಷತ್ರಿಯ ಧರ್ಮದ ಉದ್ಭಾಷಕ್ ಆಗಿರುವವನೇ ನಿಜವಾದ ಹಿಂದು ಎಂದು ಶಂಕರಾಚಾರ್ಯ ಸ್ವಾಮೀಜಿಗಳು ಹೇಳಿದ್ದಾರೆ.
ಆದರೂ, ಕೆಲವು ಇತಿಹಾಸಕಾರರ ಪ್ರಕಾರ ಹಿಂದೂ ಎಂಬ ಪದವನ್ನು ಬಳಸಲು ಆರಂಭಿಸಿದ್ದು ಪರ್ಷಿಯನ್ನರು. ಸಿಂಧು ಎಂಬ ಪದ ಹಿಂದೂವಾಗಿ ಬದಲಾಯಿತು ಎಂದು ಹೇಳುತ್ತಾರೆ. ತಮಿಳುನಾಡಿನ ರಾಜ್ಯ ಶಿಕ್ಷಣದಲ್ಲೂ ಹಿಂದೂ ಪದ ಪರ್ಷಿಯಾದಿಂದ ಬಂದಿದ್ದು ಎಂದು ಉಲ್ಲೇಖೀಸಲಾಗಿದೆ.